ಮೈಸೂರು, ಫೆ.25, 2017 : (www.justkannada.in news ) ಕಾಡಿನ ಬೆಂಕಿ ಅವಘಡಗಳಿಗೆ ಹಲವಾರು ಕಾರಣಗಳಿವೆ. ಆದರೆ ಅವುಗಳಲ್ಲಿ ಕೆಲವನ್ನು ಅವಲೋಕಿಸಿ ನೋಡಿದಾಗ, ಅದರಲ್ಲೂ ಸಂಬಂಧಪಟ್ಟ ಕಾಯ್ದೆ ಕಾನೂನುಗಳಲ್ಲಿ ಸಾಮಾನ್ಯ ತಿದ್ದುಪಡಿಗಳನ್ನು ಕಾಲ ಕಾಲಕ್ಕೆ ಅನುಗುಣವಾಗಿ ಅನುಷ್ಠಾನಕ್ಕೆ ತಂದಿದ್ದರೆ ಇಷ್ಟು ತೀವ್ರತರವಾದ ಅವಘಡವನ್ನು ತಡೆಯಬಹುದಿತ್ತು ಅನಿಸಿದೆ.
ಉದಾಹರಣೆಗೆ ಒಂದು ಮೂಲದ ಪ್ರಕಾರ ಸಂರಕ್ಷಿತ ಅಥವಾ ಸುರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿರುವ ಬಿದಿರು, ಲಾಂಟಾನ ಪೊದೆಗಳು, ಹುಲ್ಲು, ಒಣಗಿ ನಿಂತಿರುವ ಅಥವಾ ಬಿದ್ದಿರುವ ಮರಗಿಡಗಳು ಮುಂತಾದುವನ್ನು ತೆಗೆದು ಹಾಕುವ ಅಥವಾ ಅವನ್ನು ಹೊರತರುವುದನ್ನು ಕಾನೂನು ಪ್ರಕಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ರೀತಿಯಲ್ಲಿ ಇದು ಕಾಡಿನ ಸಾವಯವ ಪುನರ್ಜೀವನಕ್ಕೆ ಬಹಳ ಒಳ್ಳೆಯದು ಆದರೂ ಸಹ ಈ ಕಾನೂನುಗಳನ್ನು ಪುನರ್ ಪರಿಶೀಲಿಸಿ ಅಂತಹ ಅತಿಯಾಗಿ ಒಣಗಿ ನಿಂತ ಬಿದಿರು (ಅವು ಒಂದಕ್ಕೊಂದು ಉಜ್ಜಿದರೂ ಸಹ ಬೆಂಕಿ ಹರಡಿರುವುದನ್ನು ಅರಣ್ಯ ಇಲಾಖೆಯವರು ಖಚಿತಗೊಳಿಸಿದ್ದಾರೆ), ಒಣಗಿದ ಮರಗಿಡ, ಹುಲ್ಲು ಮುಂತಾದುವನ್ನು ಸಮಯೋಚಿತವಾಗಿ ಮತ್ತು ಸಂದರ್ಭಯೋಚಿತವಾಗಿ ತೆಗೆದು ಅವುಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡುವಂತೆ ಕಾನೂನುಗಳಲ್ಲಿ ತಿದ್ದುಪಡಿ ತಂದರೆ, ಒಂದು ರೀತಿಯ ಕಾಡಿನ ಬೆಂಕಿಯ ಅವಘಡಗಳನ್ನು ತಪ್ಪಿಸಬಹುದಿತ್ತು.
೨೦೧೩ರಲ್ಲಿ ನಾನು ಬಂಡೀಪುರಕ್ಕೆ ಹೋಗಿದ್ದ ಸಮಯದಲ್ಲಿ ಅಲ್ಲಿನ ಪ್ರವಾಸಿ ಮಂದಿರದ ಸನಿಹದಲ್ಲಿರುವ ನೀರಿನ ಹೊಂಡದ ಪಕ್ಕದಲ್ಲಿರುವ ಒಣಗಿ ನಿಂತಿರುವ ಬಿದಿರು ಮೆಳೆಯ ಚಿತ್ರ ಇದು.
ಅಂತೆಯೇ ಸುತ್ತಮುತ್ತಲಿನ ಕಾಡು ಪ್ರದೇಶದಲ್ಲಿ ಈ ತರಹದ ದೃಶ್ಯಗಳು ಸಾಮಾನ್ಯ. ಬೆಂಕಿ ಅವಘಡ ಆಗಲು ಒಂದು ಕಿಡಿ ಸಾಕು. ಆದುದರಿಂದ, ಈ ತರಹದ ಒಣ ಬಿದಿರು, ಕಾಡು ಮರ ಮುಂತಾದುವನ್ನು ತೆಗೆಯಲು ಅರಣ್ಯ ಕಾಯ್ದೆಗಳಲ್ಲಿ ತಿದ್ದುಪಡಿ ತರುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದರೆ ಒಳಿತು. ಅದರಲ್ಲೂ ಅರಣ್ಯ ಇಲಾಖೆಯಲ್ಲಿ ಈ ತರಹದ ಅವಘಡಗಳನ್ನು ತಡೆಯಲು ನುರಿತ ಮಾನವ ಸಂಪನ್ಮೂಲ ಇಲ್ಲ, ಬೆಂಕಿ ನಂದಿಸಲು ಅಗತ್ಯವಾದ ಮೂಲಭೂತ ಸೌಕರ್ಯಗಳಿಲ್ಲ. ಅಲ್ಲದೆ, ಬಿದಿರಿನ ಮೇಲಿರುವ ಹತೋಟಿ ಕಾನೂನುಗಳಿಂದ ಸಾಕಷ್ಟು ಮೇದರು ಅಗತ್ಯವಾದಷ್ಟು ಬಿದಿರಿಲ್ಲದೆ ಸಂಕಷ್ಟದಲ್ಲಿರುವುದನ್ನು ತಡೆಯಬಹುದು.
ವಸಂತಕುಮಾರ್ ಮೈಸೂರುಮಠ
ಪರಿಸರವಾದಿ
೩೯೩೫/೩, ೨ನೇ ಅಡ್ಡ ರಸ್ತೆ
ಉಮರ್ ಖಯಾಮ್ ರಸ್ತೆ
ತಿಲಕ್ ನಗರ, ಮಂಡಿ ಮೊಹಲ್ಲಾ
ಮೈಸೂರು-೧
key words : mysore-forest-fire-mysorematt